ಸ್ವಲ್ಪ ದಿನಗಳ ಹಿಂದೆ ಬರೆದ ಕತೆಗೆ ಅಂತಿಮ ಸ್ಪರ್ಶ ನೀಡಿ ಇಲ್ಲಿ ಟಪ್ಪಾಲು ಮಾಡಿದ್ದೇನೆ..
ಭಾಗ ೧ ಇಲ್ಲಿದೆ..ಶೀಘ್ರದಲ್ಲೇ ಮುಂದುವರಿದ ಭಾಗವನ್ನು ಓದುವಿರಂತೆ...ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ....
------------------------------------------------------------------------------------------
ತುಂಬಾ ವೇಗವಾಗಿ ಡ್ರೈವ್ ಮಾಡ್ತಾ ಇದ್ದೇನೆ ಅಂತ ನಂಗೆ ಗೊತ್ತಿದ್ರೂ ಇನ್ನೂ ಎಕ್ಸಲೇಟರ್ ಅದುಮುತ್ತಲೇ ವೇಗ ಹೆಚ್ಚಿಸುತ್ತಾ ಇದ್ದೆ.ಪಕ್ಕದಲ್ಲಿ ಹಾದು ಹೋಗುತ್ತಿರುವ ಜನರು,ವಾಹನದವರು ಎಲ್ಲಾ ಇದೇನು ಹುಚ್ಚು ಎನ್ನುವಂತೆ ನೋಡುತ್ತಿದ್ದರು.ನನ್ನನ್ನು ನಿಯಂತ್ರಿಸಬೇಕಾಗಿದ್ದ ಮನಸ್ಸು ತನ್ನ ನಿಯಂತ್ರಣ ಕಳೆದುಕೊಂಡಿತ್ತು.ಒಮ್ಮೆ ಬರೀ ನಿಶ್ಯಬ್ಧ.. ಬೆನ್ನು ಬೆನ್ನಿಗೇ ಏನೇನೋ ಆಲೋಚನೆಗಳು.ಭೂಮಿ ಬಿಟ್ಟು ನಾನೆಲ್ಲೋ ಹಾರುತ್ತಿರುವಂತೆ ತಲೆಯೆಲ್ಲಾ ಅಲ್ಲಾಡುತ್ತಿರುವಂತೆ ಭಾಸವಾಗುತಿತ್ತು.ಎಲ್ಲಿಗೆ ಈ ಪಯಣ?ಏನೋ ಗೊತ್ತಿಲ್ಲ.ಆದ್ರೆ ಒಂದಂತೂ ನಿಜ...ಒಂದೇ ಕಡೆ ಇರುವ ಪರಿಸ್ಥಿತಿಯಲ್ಲಿ ಸಧ್ಯ ನಾನಿಲ್ಲ!
******************************
ಮನೆಯಲ್ಲಿ ಹೀಗೆನ್ನುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ."…ನಿಂಗೆ ಆ ಹುಡುಗೀನೇ ಹೆಚ್ಚಾಗಿದ್ರೆ ನೀನು ಹೋಗು ನಿನ್ನ ಪಾಡಿಗೆ..ಮನೆ ಹತ್ತಿರ ಮಾತ್ರ ಸುಳೀಬೇಡ .ನಿನ್ನಂತ ಮಗನ ಅಗತ್ಯ ನಮಗಿಲ್ಲ.."ಎಂದು ಪಪ್ಪ ಹೇಳಿದಾಗ ಆಕಾಶ ತಲೆಮೇಲೆ ಬಿದ್ದಂತಾಗಿತ್ತು.ಆದರೂ ಕೊನೆ ಕ್ಷಣ ನಿರ್ಧಾರ ಬದಲಿಸ್ತಾರೋ ಅಂತ ಅಮ್ಮನ ಕಡೆ ಮುಗ್ಧವಾಗಿ ನೋಡಿದಾಗ "ಅಲ್ಲಾರೀ.. ಚಿಕ್ಕಂದಿನಿಂದ ತುಂಬಾ ಮುದ್ದು ಮಾಡಿ ಬೆಳೆಸ್ತೀವಲ್ಲಾ ಎಲ್ಲಾ ಅದರ ಪ್ರಭಾವ...ಈಗ ದೊಡ್ಡವನಾಗಿ ಬಿಟ್ಟ ಅಲ್ವಾ..ನಮ್ಮ ಮಾತು ಎಲ್ಲಿ ಕೇಳ್ತಾನೆ. ಅವನ ಫ್ರೆಂಡ್ಸ್ ನೋಡಿ; ಎಲ್ಲಾ ಅಂತವರೇ..ಒಂದ್ಸಾರಿ ಬುದ್ಧಿ ಹೇಳಿ ಅಂದ್ರೆ ನೀವು ಕೂಡ ವಿಚಾರಿಸಿಲ್ಲ..ನಮ್ಮ ಪ್ರವೀಣ..ನಮ್ಮ ಪ್ರವೀಣ ಅಂತಿದ್ರಿ..ಗೊತ್ತಾಯ್ತಾ..ಈಗ ನೋಡಿ ಪ್ರೀತಿ ವಿಷಯ ಈ ಮಟ್ಟಕ್ಕೆ ಬಂದು ನಿಂತಿದೆ.ಕೃಪಾಕರ್ ಮಗಳನ್ನು ಮದುವೆ ಆಗ್ತಾನಂತೆ ಇವನು.ಅಲ್ಲಾ ನಮಗೇನು; ಇಡೀ ಊರಿಗೇ ಗೊತ್ತಿದೆ ಅವರು ಎಂತವರು ಅಂತ.ಅಪ್ಪ ಮಗ ಇಬ್ಬರೂ ಕೆಟ್ಟವರೇ.ಅವರು ಸಂಪಾದಿಸಿರೋ ಆಸ್ತಿಯೆಲ್ಲಾ ಕಳ್ಳ ದಂಧೆಯಿಂದಲೇ.ಅವರ ಮಗ ಕಳೆದ ವಾರವಷ್ಟೇ ಜೈಲಿಂದ ಬಂದಿದ್ದಾನೆ.ಮತ್ತೆ ಆ ಮನೆ ಹುಡುಗಿಯನ್ನು ಮನೆ ತುಂಬಿಸಿಕೊಳ್ಳುವುದಾ..?ಆ ಮನೆ ಸಂಬಂಧ ಮಾಡೋದ್ಕಿಂತ ಸಾಯೋದೇ ವಾಸಿ.."ಅಂತ ಅವರ ಕೊನೆಯ ಮಾತು ಹೇಳಿ ಪಪ್ಪನ ಪರವಾಗಿ ನಿಂತರು.
ಅದಕ್ಕೆ ಪಪ್ಪ"ಅಲ್ಲಾ..ನಾವ್ಯಾಕೆ ಸಾಯಬೇಕು..ಇವನನ್ನು ಚೆನ್ನಾಗಿ ಸಾಕಿ ನಮ್ಮ ಕರ್ತವ್ಯವನ್ನು ಮುಕ್ಕಾಲು ಪಾಲು ಮುಗಿಸಿದ್ದೀವೀ ..ನಾವು ಹೇಳಿದ ಮಾತು ಕೇಳೋಲ್ಲ ಅಂದಮೇಲೆ ಅವನು ಏನ್ ಬೇಕಾದ್ರೂ ಮಾಡ್ಕೊಳ್ಳಿ ಬಿಡು..." ಅಂತ ಹೇಳಿದರು.
ಹೌದು ಇದು ಪಪ್ಪನ ಕಡೆ ನಿರ್ಧಾರ..
ಅಮ್ಮನೂ ವಿರೋಧಿಸಿದ್ದರಿಂದ ಇನ್ನೂ ಅವ್ರು ಒಪ್ಪಿಕೊಳ್ಳುವ ಸೂಚನೆ ಇಲ್ಲ!
ನಾನು ಹೆಚ್ಚೇನೂ ಮಾತಾಡುವ ಹಾಗಿಲ್ಲ. ಪಪ್ಪ ಅಂದ್ರೆ ಅಷ್ಟು ಭಯ ನಂಗೆ.ಚಿಕ್ಕಂದಿನಿಂದಲೂ ಅವರ ಎದುರು ನಾನು ಮೌನಿಯಾಗಿದ್ದುದೇ ಹೆಚ್ಚು.ಹೇಗೋ ಅಮ್ಮನ ಮೂಲಕ ಒಂದು ಮನವಿ ಸಲ್ಲಿಸಿದ್ದೆ.ಅದೂ ಕೈಕೊಟ್ಟಿತ್ತು !!
ಅಮ್ಮ ಕೂಡ ಯಾಕೆ ಹಾಗೆ ಮಾತಾಡಿದ್ರು ಅಂತ ಗೊತ್ತಾಗ್ಲಿಲ್ಲ..ಪಾಪ ಅವರಿನ್ನು ಏನು ತಾನೇ ಮಾಡಿಯಾರು.ಶ್ರೀಧರ್ ಅಂದ್ರೆ ತುಂಬಾ ಶಿಸ್ತಿನ ಮನುಷ್ಯ ಅಂತ ಹೇಳ್ತಾ ಇದ್ದರು ಊರಲ್ಲಿ ಎಲ್ಲರೂ.ಹೌದು ಅವರು ತೆಗೆದುಕೊಳ್ಳುವ ನಿರ್ಧಾರಗಳು ಹಾಗೇನೆ..ಒಂದು ಸಾರಿ ಹೇಳಿದರೆ ಮುಗಿಯಿತು ಮತ್ತೆ ಬದಲಾವಣೆ ಇಲ್ಲ. ಎಂದಿಗೂ... ಎಂದೆಂದಿಗೂ!!
ಏನು ಮಾಡಬೇಕು ಅಂತ ತೋಚದೆ ನನ್ನ ಕೋಣೆಗೆ ಹೋಗಿ ಬಾಗಿಲು ಹಾಕಿ ಕುರ್ಚಿಮೇಲೆ ಸತ್ತಂತೆ ಬಿದ್ದುಕೊಂಡೆ! ಮನೆಯವರಿಂದ ದೂರಹೋಗಿ ಬದುಕಬೇಕು ಎಂದು ಪ್ರೇರೇಪಿಸುವ ಈ ಹಾಳು ಪ್ರೀತಿ ಅದ್ಯಾಕೆ ಇನ್ನೂ ಭೂಮಿ ಮೇಲೆ ಇದೆ ಅಂತ ಅನ್ನಿಸ್ತು ಒಂದು ಕ್ಷಣ! ಮನೆಯವರ ಮಾತು ಕೇಳೋದಾ,ಅವಳನ್ನು ಮರೆತುಬಿಡೋದಾ?? ಉಹುಂ..ಇದು ಆಗದೆ ಇರುವ ಕೆಲಸವೆಂದು ಯೋಚಿಸ್ತಾ ಇರುವಾಗಲೇ ಟೇಬಲ್ ಮೇಲೆ ಕೂತಿದ್ದ ನನ್ನ ಹುಟ್ಟುಹಬ್ಬದ ದಿನ ನವ್ಯ ಕೊಟ್ಟಿದ್ದ ಮೊಲದ ಗೊಂಬೆ ನನ್ನನ್ನೇ ದಿಟ್ಟಿಸುತಿತ್ತು!! ಸಿನೆಮಾಗಳಲ್ಲಿ ಆಗುವಂತೆ ಕೊನೆ ಕ್ಷಣದಲ್ಲಿ ತಂದೆತಾಯಿಯರಿಗೆ ಜ್ಞಾನೋದಯವಾಗಿ ಅವರು ಮದುವೆಗೆ ಒಪ್ಪಿಗೆ ಕೊಡುವಂತಹ ಸಂಭವವೇನು ಇಲ್ಲ ಅಂತನಿಸಿತು!!
ನವ್ಯಳಿಗೆ ಒಮ್ಮೆ ಫೋನ್ ಮಾಡಿ ಎಲ್ಲಾ ವಿಷಯ ಹೇಳ್ತೀನಿ ಅವಳು ಏನ್ ಹೇಳ್ತಾಳೋ ನೋಡೋಣ ಅಂತ ಮೊಬೈಲ್ ಕೈಗೆತ್ತಿಕೊಂಡೆ.ಅವಳು ಪಾಪ ಇನ್ನೇನು ಮಾತಾಡ್ತಾಳೆ "ಎಲ್ಲಾ ನಿನ್ನಿಷ್ಟ ಪ್ರವೀಣ್" ಅಂತ ಎಷ್ಟು ಬೇಜಾರಾಗಿದ್ರೂ ಹೇಳ್ತಾಳೆ, ಈ ಟೈಮಲ್ಲಿ ಅವಳಿಗೆ ಸುಮ್ನೆ ಯಾಕೆ ನೋವು ಕೊಡೋದು;ಬೇಡ ಎಂದು ಮೊಬೈಲ್ ಮತ್ತೆ ಟೇಬಲ್ ಮೇಲಿಟ್ಟೆ..
ಇನ್ನೇನು ಮಾಡುವುದು..ಗೊತ್ತಾಗ್ತಿಲ್ಲ...
ಹೇ ಇಲ್ನೋಡು... ನಾನಿದ್ದೀನಿ ಅಲ್ವಾ ನಿನ್ನ ಜೊತೆ ಅಂತ ಹೇಳುವ ಹಾಗೆ ಕಿಟಕಿಯ ಆಚೆ ಕಡೆ ಬೈಕ್ ನಿಂತಿತ್ತು!
ಸರಿ ನಾನೆಲ್ಲೋ ಹೋಗ್ಬೇಕು ..
ಎಲ್ಲಿಗೆ ??
ಉಹುಂ...ಅದು ಗೊತ್ತಿಲ್ಲ!!
ಹೊರಬಂದು ಬೈಕ್ ಬೆನ್ನು ಹತ್ತಿ ಕೂತೆ..ಎಷ್ಟು ತುಳಿದರೂ ಸ್ಟಾರ್ಟ್ ಆಗ್ತಾನೇ ಇಲ್ಲ..ಅಮ್ಮ ಒಳಗಡೆಯಿಂದ "ಅವನೆಲ್ಲೋ ಹೋಗ್ತಾ ಇದ್ದಾನೆ ನೋಡಿ ಒಮ್ಮೆ..." ಅಂತಂದಿದಕ್ಕೆ ಪಪ್ಪ, "ಅವನೆಲ್ಲಿ ಬೇಕಾದ್ರೂ ಹೋಗ್ತಾನೆ ನಿನಗ್ಯಾಕೆ ಈಗ..ಸುಮ್ನೆ ಒಳಗೆ ಹೋಗಿ ನಿನ್ನ ಕೆಲಸ ನೋಡ್ಕೋ...ಯಾರು ಎಲ್ಲಿ ಹೋದರು ಕೊನೆಗೆ ಮನೆಗೆ ಬರಲೇ ಬೇಕು"ಹೇಳಿದ ಹಾಗೆ ಕೇಳಿಸಿತು. ಬೇಸರ,ಅಳು,ಕೋಪ ಎಲ್ಲಾ ತುಂಬಿಕೊಂಡಿದ್ದ ನಂಗೆ ಇನ್ನೂ ಸಿಟ್ಟು ಬಂದಂತಾಗಿ ಜೋರಾಗಿ ತುಳಿದಾಗ ಬೈಕ್ ಸ್ಟಾರ್ಟ್ ಆಯಿತು!!
************************
ಹೊರಬಂದಾಗ ಯಾವಾಗಲೂ ಹೋಗುತ್ತಿದ್ದ ದಾರಿಯಲ್ಲಿ ಎಲ್ಲವೂ ವಿಚಿತ್ರವಾಗಿ ಕಂಡಿತು..ಅಲ್ಲಾ ನನ್ನನ್ನು ವಿಚಿತ್ರವಾಗಿ ಅಣಕಿಸುತ್ತಿದ್ದವೋ ಏನೋ!?
ಅನೀರೀಕ್ಷಿತವಾಗಿ ಅವಳ ಪರಿಚಯವಾದದ್ದು..ನಾವು ಆತ್ಮೀಯರಾಗಿದ್ದು..ಪ್ರಣಯಾಂಕುರವಾಗಿದ್ದು ಎಲ್ಲವೂ ಮನಃಪಟಲದಲ್ಲಿ ಫ್ಲಾಶ್ ಬ್ಯಾಕ್ ನ ಹಾಗೆ ಮೂಡಿ ಬಂದವು.ನಾನು ಆ ಮುದ್ದು ಮನಸ್ಸಿನ ಹುಡುಗಿಯ ಪ್ರೇಮಿಯಾಗಿದ್ದು ತಪ್ಪಲ್ಲ ಎಂದೆನಿಸಿತು!!
ಹೌದು..ನಾನು ಹೆಚ್ಚೋ..ಅವಳು ಹೆಚ್ಚೋ,ಎಂದು ಸ್ಪರ್ಧೆಯಲ್ಲಿರುವಂತೆ ಪರಸ್ಪರ ಪ್ರೀತಿಸುತಿದ್ದೇವೆ!!
ನನ್ನ ಮನೆಯಲ್ಲೇ ಈಗ ಇಷ್ಟೊಂದು ರಾದ್ಧಾಂತ ಆಗಿದೆ ಅಂದರೆ, ವಿಷಯ ಅವಳ ಮನೆಯವರ ಗಮನಕ್ಕೆ ಬಂದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು....
ಮುಂಚೆನೇ ಅವಳ ಮನೆ ಒಂಥರಾ ಜೈಲ್ ಇದ್ದ ಹಾಗಿದೆ!!
ಇಲ್ಲ....ಊಹಿಸಲಾಗುತ್ತಿಲ್ಲ ನನ್ನಿಂದ!
ಸುಳಿಯಲ್ಲಿ ದೋಣಿ ಸಿಕ್ಕಿರುವಾಗ ದಡ ಸೇರುವ ನಂಬಿಕೆ ಕಳೆದುಕೊಂಡ ಅಂಬಿಗನಂತೆ ಆಗ್ತಾ ಇದ್ದೇನೆ!
ಜೀವನ ಪ್ರಯಾಣದಲ್ಲಿ ಅವಳಿಗೆ ನಾನು ಸಿಕ್ಕಿದ್ದು ತಪ್ಪೇ? ಪ್ರೀತಿಸಿದ್ದು ತಪ್ಪೇ?
ಅರಿವಿಲ್ಲದೆ ನನ್ನನ್ನೇ ದ್ವೇಷಿಸಲಾರಂಭಿಸುತ್ತಿದ್ದೇನೆ!!
ಅವಳನ್ನು ಮತ್ತೆ ಮನೆಯಲ್ಲಿ ಹೆತ್ತವರನ್ನು ;ಎರಡೂ ಕಡೆಯೂ ಸಂತುಷ್ಟಿಗೊಳಿಸುವ ಯಾವ ದಾರಿ ಕೂಡ ಕಾಣಿಸ್ತಾ ಇಲ್ಲ ..
ಅದರೆ ಇನ್ನೂ ಒಂದೇ ಒಂದು ದಾರಿ ಉಳಿದಿದೆ..
ಏನದು......?
ಹೌದು ಇದೊಂದೇ ಪರಿಹಾರ..
(ಮುಂದುವರೆಯುವುದು ....)
------------------------------------------------------------------------------------------